9
ಯೇಸು ಸಬ್ಬತ್ ದಿನದಲ್ಲಿ ಹುಟ್ಟು ಕುರುಡನಿಗೆ ಕಣ್ಣು ಕೊಟ್ಟದ್ದು
ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು. ಯೇಸುವಿನ ಶಿಷ್ಯರು, “ಬೋಧಕರೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಈ ಮನುಷ್ಯನ ಪಾಪದಿಂದಲೋ ಇವನ ತಂದೆತಾಯಿಗಳ ಪಾಪದಿಂದಲೋ?” ಎಂದು ಅವರನ್ನು ಕೇಳಿದರು.
ಯೇಸು, “ಈ ಮನುಷ್ಯನಾಗಲಿ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಯಿತು. ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು. ನಾನು ಈ ಲೋಕದಲ್ಲಿರುವಾಗ ಲೋಕದ ಬೆಳಕಾಗಿದ್ದೇನೆ,” ಎಂದರು.
ಯೇಸು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಮಣ್ಣಿನ ಲೇಪಮಾಡಿ ಆ ಲೇಪವನ್ನು ಅವನ ಕಣ್ಣುಗಳಿಗೆ ಹಚ್ಚಿದರು. ಅವನಿಗೆ, “ಹೋಗು, ಸಿಲೋವ ಕೊಳದಲ್ಲಿ ತೊಳೆದುಕೋ,” ಎಂದರು. ಸಿಲೋವ ಎಂದರೆ, “ಕಳುಹಿಸಲಾದವನು” ಎಂದರ್ಥ. ಕುರುಡನು ಹೋಗಿ ಕಣ್ಣು ತೊಳೆದುಕೊಂಡು ದೃಷ್ಟಿಹೊಂದಿದವನಾಗಿ ಬಂದನು.
ಆಗ ನೆರೆಯವರು ಮತ್ತು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ಕಂಡವರು, “ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೇ?” ಎಂದರು. ಕೆಲವರು, “ಹೌದು, ಇವನೇ,” ಎಂದರು.
ಇನ್ನೂ ಬೇರೆಯವರು, “ಇಲ್ಲಾ, ಇವನು ಅವನ ಹಾಗೆ ಇದ್ದಾನೆ,” ಎಂದರು.
ಅವನಾದರೋ, “ನಾನೇ ಅವನು,” ಎಂದು ಹೇಳಿದನು.
10 ಕೆಲವರು ಅವನಿಗೆ, “ಹಾಗಾದರೆ ನಿನಗೆ ದೃಷ್ಟಿ ಹೇಗೆ ಬಂತು?” ಎಂದು ಕೇಳಲು,
11 ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ,’ ಎಂದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು, ನನಗೆ ದೃಷ್ಟಿ ಬಂತು,” ಎಂದನು.
12 ಅವರು ಅವನಿಗೆ, “ಆತನು ಎಲ್ಲಿದ್ದಾನೆ?” ಎಂದು ಕೇಳಲು,
ಅವನು, “ನನಗೆ ಗೊತ್ತಿಲ್ಲ,” ಎಂದನು.
ಸೂಚಕಕಾರ್ಯವನ್ನು ಕುರಿತು ಫರಿಸಾಯರು ಪರಿಶೋಧಿಸಿದ್ದು
13 ಜನರು ಮೊದಲು ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು. 14 ಯೇಸು ಮಣ್ಣಿನ ಲೇಪಮಾಡಿ ಅವನಿಗೆ ದೃಷ್ಟಿಕೊಟ್ಟ ದಿನವು ಯೆಹೂದ್ಯರ ಸಬ್ಬತ್ ದಿನವಾಗಿತ್ತು. 15 ಆದ್ದರಿಂದ ಫರಿಸಾಯರು ಅವನಿಗೆ, ಹೇಗೆ ದೃಷ್ಟಿ ಬಂತು ಎಂದು ತಿರುಗಿ ಅವನನ್ನು ಕೇಳಲು, ಅವನು ಅವರಿಗೆ, “ಯೇಸು ಮಣ್ಣಿನ ಲೇಪವನ್ನು ನನ್ನ ಕಣ್ಣುಗಳ ಮೇಲಿಡಲು ನಾನು ತೊಳೆದುಕೊಂಡೆನು. ಈಗ ನೋಡುತ್ತೇನೆ,” ಎಂದನು.
16 ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ. ಏಕೆಂದರೆ ಆತನು ಯೆಹೂದ್ಯರ ಸಬ್ಬತ್ ದಿನವನ್ನು ಕೈಗೊಳ್ಳುವುದಿಲ್ಲ,” ಎಂದರು.
ಬೇರೆ ಕೆಲವರು, “ಹಾಗಾದರೆ ಪಾಪಿಯಾದ ಮನುಷ್ಯನು ಇಂಥ ಸೂಚಕಕಾರ್ಯಗಳನ್ನು ಮಾಡುವುದು ಹೇಗೆ?” ಎಂದರು. ಹೀಗೆ ಅವರಲ್ಲಿ ಭೇದ ಉಂಟಾಯಿತು.
17 ಅವರು ತಿರುಗಿ, “ಆತನು ನಿನಗೆ ದೃಷ್ಟಿಕೊಟ್ಟದ್ದರಿಂದ ಆತನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದಾಗ,
ಅವನು, “ಅವರು ಒಬ್ಬ ಪ್ರವಾದಿ,” ಎಂದನು.
18 ದೃಷ್ಟಿಹೊಂದಿದವನ ತಂದೆತಾಯಿಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ, ಅವನು ಕುರುಡನಾಗಿದ್ದು ದೃಷ್ಟಿಹೊಂದಿದನೆಂದು ನಂಬಲಿಲ್ಲ. 19 ಅವರು, “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಕಣ್ಣು ಕಾಣುವುದು ಹೇಗೆ?” ಎಂದು ಅವರನ್ನು ಕೇಳಿದರು.
20 ಅವನ ತಂದೆತಾಯಿಗಳು ಅವರಿಗೆ, “ಇವನು ನಮ್ಮ ಮಗನೆಂದೂ ಇವನು ಕುರುಡನಾಗಿ ಹುಟ್ಟಿದನೆಂದೂ ನಾವು ಬಲ್ಲೆವು. 21 ಆದರೆ ಇವನಿಗೆ ಈಗ ಕಣ್ಣು ಕಾಣುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೆಂದೂ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ; ಇವನು ಪ್ರಾಯದವನಾಗಿದ್ದಾನೆ. ಇವನೇ ತನ್ನ ವಿಷಯವಾಗಿ ಮಾತನಾಡುವನು,” ಎಂದು ಹೇಳಿದರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಭಯಪಟ್ಟಿದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ, ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯ ನಾಯಕರು ಈ ಮೊದಲೇ ಗೊತ್ತುಮಾಡಿದ್ದರು. 23 ಆದ್ದರಿಂದ ಅವನ ತಂದೆತಾಯಿಗಳು, “ಇವನು ಪ್ರಾಯದವನಾಗಿದ್ದಾನೆ, ಇವನನ್ನೇ ಕೇಳಿ,” ಎಂದು ಹೇಳಿದರು.
24 ಅವರು ಕುರುಡನಾಗಿದ್ದವನನ್ನು ಮತ್ತೊಮ್ಮೆ ಕರೆದು ಅವನಿಗೆ, “ದೇವರಿಗೆ ಮಹಿಮೆಯನ್ನು ಸಲ್ಲಿಸು, ಆ ಮನುಷ್ಯ ಪಾಪಿ ಎಂದು ನಾವು ಬಲ್ಲೆವು,” ಎಂದರು.
25 ಅದಕ್ಕೆ ಅವನು, “ಅವರು ಪಾಪಿಯೋ ಏನೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆ, ನಾನು ಕುರುಡನಾಗಿದ್ದೆನು; ಈಗ ನನಗೆ ಕಾಣುತ್ತದೆ,” ಎಂದು ಉತ್ತರಕೊಟ್ಟನು.
26 ಆದ್ದರಿಂದ ಅವರು ಅವನಿಗೆ, “ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
27 ಅವನು ಉತ್ತರವಾಗಿ, “ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ. ಆದರೆ ನೀವು ಕೇಳಲಿಲ್ಲ, ನೀವು ತಿರುಗಿ ಏಕೆ ಕೇಳುತ್ತೀರಿ? ನೀವು ಸಹ ಅವರ ಶಿಷ್ಯರಾಗುವುದಕ್ಕೆ ಬಯಸುತ್ತೀರೋ?” ಎಂದನು.
28 ಆಗ ಅವರು ಅವನನ್ನು ದೂಷಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು. 29 ಮೋಶೆಯ ಮೂಲಕ ದೇವರು ಮಾತನಾಡಿದನೆಂದು ನಾವು ಬಲ್ಲೆವು. ಆದರೆ ಈತನು ಎಲ್ಲಿಂದ ಬಂದನೋ ನಮಗೆ ಗೊತ್ತಿಲ್ಲ,” ಎಂದರು.
30 ಅದಕ್ಕೆ ಅವನು ಅವರಿಗೆ, “ಏನಾಶ್ಚರ್ಯ! ಅವರು ನನ್ನ ಕಣ್ಣುಗಳನ್ನು ತೆರೆದರೂ ಅವರು ಎಲ್ಲಿಂದ ಬಂದವನೆಂದು ನಿಮಗೆ ತಿಳಿಯದೆ ಇರುವುದು. 31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲ; ಆದರೆ ಯಾರು ದೇವರಿಗೆ ಭಯಪಡುವವರಾಗಿದ್ದು ಅವರ ಚಿತ್ತದಂತೆ ನಡೆಯುತ್ತಾರೋ, ಅಂಥವರಿಗೆ ಕಿವಿಗೊಡುತ್ತಾರೆಂದು ನಾವು ಬಲ್ಲೆವು. 32 ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ. 33 ಅವರು ದೇವರಿಂದ ಬಂದವರಲ್ಲದಿದ್ದರೆ ಅವರಿಂದ ಏನೂ ಮಾಡಲಾಗುತ್ತಿರಲಿಲ್ಲ,” ಎಂದನು.
34 ಅದಕ್ಕೆ ಅವರು, “ನೀನು ಪಾಪದಲ್ಲಿಯೇ ಪೂರ್ಣವಾಗಿ ಹುಟ್ಟಿದವನು. ನೀನು ನಮಗೆ ಬೋಧಿಸುತ್ತೀಯಾ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
ಆತ್ಮಿಕ ಕುರುಡುತನ
35 ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು.
36 ಅದಕ್ಕೆ ಅವನು, “ಸ್ವಾಮೀ, ನಾನು ಅವರನ್ನು ನಂಬುವಂತೆ ಅವರು ಯಾರೆಂದು ತಿಳಿಸಿರಿ,” ಎಂದನು.
37 ಯೇಸು ಅವನಿಗೆ, “ನೀನು ಆತನನ್ನು ಕಂಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು,” ಎಂದು ಹೇಳಿದರು.
38 ಆಗ ಅವನು, “ಸ್ವಾಮೀ, ನಾನು ನಂಬುತ್ತೇನೆ,” ಎಂದು ಹೇಳಿ ಯೇಸುವಿಗೆ ಅಡ್ಡಬಿದ್ದನು.
39 ಯೇಸು, “ಕುರುಡರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನಾನು ನ್ಯಾಯತೀರ್ಪು ಮಾಡುವುದಕ್ಕಾಗಿ ಈ ಲೋಕಕ್ಕೆ ಬಂದಿದ್ದೇನೆ,” ಎಂದರು.
40 ಯೇಸುವಿನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತುಗಳನ್ನು ಕೇಳಿ, “ನಾವು ಸಹ ಕುರುಡರೋ?” ಎಂದು ಯೇಸುವನ್ನು ಪ್ರಶ್ನಿಸಿದರು.
41 ಅದಕ್ಕೆ ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ, ‘ನಮಗೆ ಕಾಣುತ್ತದೆ,’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪವು ನಿಮಗೆ ಉಳಿದಿದೆ,” ಎಂದರು.