11
ಯೆಹೋವ ದೇವರಿಂದ ಬೆಂಕಿ
ಇಸ್ರಾಯೇಲ್ ಜನರು ತಮಗೆ ಕಷ್ಟವಾಯಿತೆಂದು ಗೊಣಗುಟ್ಟಿದಾಗ, ಯೆಹೋವ ದೇವರು ಅದನ್ನು ಕೇಳಿ ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿ ಬೀಳುವಂತೆ ಮಾಡಿದ್ದರಿಂದ ಅವರ ಪಾಳೆಯದ ಕಟ್ಟಕಡೆಯ ಭಾಗದಲ್ಲಿದ್ದವರು ಸುಟ್ಟುಹೋದರು. ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ, ಮೋಶೆಯು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು ಆಗ ಬೆಂಕಿಯು ಆರಿಹೋಯಿತು. ಯೆಹೋವ ದೇವರು ಹತ್ತಿಸಿದ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ* ಎಂದು ಹೆಸರಿಟ್ಟರು.
ಯೆಹೋವ ದೇವರಿಂದ ಲಾವಕ್ಕಿಗಳು
ಅವರೊಳಗಿದ್ದ ಮಿಶ್ರ ಗುಂಪಿನ ಜನರು ಮಾಂಸಕ್ಕಾಗಿ ದುರಾಶೆಪಟ್ಟರು. ಇಸ್ರಾಯೇಲರು ಸಹ ತಿರುಗಿ ಅಳುತ್ತಾ, “ನಮಗೆ ಮಾಂಸವನ್ನು ತಿನ್ನುವುದಕ್ಕೆ ಕೊಡುವವರು ಯಾರು? ನಾವು ಈಜಿಪ್ಟ್ ದೇಶದಲ್ಲಿ ಉಚಿತವಾಗಿ ತಿಂದ ಮೀನನ್ನೂ ಸವತೆ ಕಾಯಿಯನ್ನೂ ಕರ್ಬೂಜಗಳನ್ನೂ ನೀರುಳ್ಳಿ ಈರುಳ್ಳಿ ಬೆಳ್ಳುಳ್ಳಿಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ. ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು, ಈ ಮನ್ನವಲ್ಲದೆ ಬೇರೆ ಯಾವುದೂ ನಮ್ಮ ಕಣ್ಣುಗಳ ಮುಂದೆ ಇರುವುದಿಲ್ಲ,” ಎಂದರು.
ಆ ಮನ್ನವು ಕೊತ್ತಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸಿತು. ಜನರು ಹೊರಗೆ ಹೋಗಿ ಅದನ್ನು ಕೂಡಿಸಿ, ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ, ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡುತ್ತಿದ್ದರು. ಅದರ ರುಚಿಯು ಓಲಿವ್ ಎಣ್ಣೆಯಿಂದ ಮಾಡಿದ ರೊಟ್ಟಿಯಹಾಗೆ ಇತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುವಾಗ ಅದರೊಂದಿಗೆ ಮನ್ನವು ಬೀಳುತ್ತಿತ್ತು.
10 ಆಗ ಪ್ರತಿಯೊಂದು ಕುಟುಂಬದ ಜನರು ತಮ್ಮ ಗುಡಾರದ ಬಾಗಿಲಿನಲ್ಲಿ ನಿಂತು ಅಳುವುದನ್ನು ಮೋಶೆ ಕೇಳಿದನು. ಯೆಹೋವ ದೇವರು ಬಹಳ ಕೋಪಗೊಂಡರು. ಮೋಶೆ ಗಲಿಬಿಲಿಗೊಂಡನು. 11 ಮೋಶೆಯು ಯೆಹೋವ ದೇವರಿಗೆ, “ಈ ಎಲ್ಲಾ ಜನರ ಭಾರವನ್ನು ನನ್ನ ಮೇಲೆ ಹೊರಿಸಿ ನೀವು ಏಕೆ ತೊಂದರೆಯನ್ನು ನಿಮ್ಮ ಸೇವಕನ ಮೇಲೆ ತಂದಿದ್ದೀರಿ? ನಿಮ್ಮನ್ನು ಅತೃಪ್ತಿಗೊಳಿಸಲು ನಾನೇನು ಮಾಡಿದ್ದೇನೆ? 12 ನಾನು ಈ ಎಲ್ಲಾ ಜನರನ್ನು ಗರ್ಭಧರಿಸಿ ಜನ್ಮವಿತ್ತೆನೋ? ದಾದಿಯು ಹಸುಗೂಸನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವರ ಪಿತೃಗಳಿಗೆ ನೀವು ವಾಗ್ದಾನ ಮಾಡಿದ ದೇಶಕ್ಕೆ ನಡೆಸಬೇಕೆಂದು ನೀವು ನನಗೇಕೆ ಹೇಳಿದ್ದೀರಿ? 13 ಈ ಸಮಸ್ತ ಜನರಿಗೆ ಕೊಡುವುದಕ್ಕೆ ಮಾಂಸವು ನನಗೆ ಎಲ್ಲಿಂದ ದೊರಕುವುದು? ‘ನಮಗೆ ತಿನ್ನಲು ಮಾಂಸವನ್ನು ಕೊಡು,’ ಎಂದು ನನ್ನ ಬಳಿಗೆ ಬಂದು ಅಳುತ್ತಿದ್ದಾರೆ. 14 ನಾನು ಒಬ್ಬೊಂಟಿಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವುದಕ್ಕೆ ಶಕ್ತನಲ್ಲ. ಅದು ನನಗೆ ಅತಿದೊಡ್ಡ ಭಾರವಾಗಿದೆ. 15 ಈ ರೀತಿಯಲ್ಲಿ ನೀವು ನನ್ನನ್ನು ನಡೆಸುವುದಾದರೆ, ಈಗಲೇ ನನ್ನನ್ನು ಕೊಂದುಬಿಡಿ. ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತರೆ, ನಾನು ನನ್ನ ಸ್ವಂತ ನಾಶವನ್ನು ಎದುರಿಸದಂತೆ ಕಾಪಾಡಿ,” ಎಂದನು.
16 ಯೆಹೋವ ದೇವರು ಮೋಶೆಗೆ, “ಜನರ ನಾಯಕರೆಂದೂ, ಹಿರಿಯರೆಂದೂ, ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂತಹ ಇಸ್ರಾಯೇಲರ ಹಿರಿಯರೊಳಗಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ, ಅವರನ್ನು ದೇವದರ್ಶನದ ಗುಡಾರದ ಕಡೆಗೆ ಕರೆದುಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ. 17 ಆಗ ನಾನು ಇಳಿದುಬಂದು, ಅಲ್ಲಿ ನಿನ್ನ ಸಂಗಡ ಮಾತನಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಸ್ವಲ್ಪವನ್ನು ಅವರಿಗೂ ಕೊಡುವೆನು. ಆಗ ನೀನು ಅದನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಜನರ ಭಾರವನ್ನು ಹೊರುವರು,” ಎಂದು ಹೇಳಿದರು.
18 ಜನರಿಗೆ ನೀನು, “ ‘ನಾಳೆಗಾಗಿ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ. ಆಗ ಮಾಂಸವನ್ನು ತಿನ್ನುವಿರಿ. ನಮಗೆ ಯಾವನು ಮಾಂಸವನ್ನು ತಿನ್ನುವುದಕ್ಕೆ ಕೊಡುವನು? ಈಜಿಪ್ಟ್ ದೇಶದಲ್ಲಿ ನಮಗೆ ಒಳ್ಳೆಯದು ಇತ್ತು,’ ಎಂದು ಹೇಳಿ, ಯೆಹೋವ ದೇವರು ಕೇಳುವಂತೆ ಅತ್ತಿರಿ. ಆದಕಾರಣ ಯೆಹೋವ ದೇವರು ನಿಮಗೆ ತಿನ್ನುವುದಕ್ಕೆ ಮಾಂಸವನ್ನು ಕೊಡುವನು ಮತ್ತು ನೀವು ಅದನ್ನು ತಿನ್ನುವಿರಿ. 19 ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವೂ ಅಲ್ಲ, ಐದು ದಿನವೂ ಅಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ. 20 ಅದು ನಿಮ್ಮ ಮೂಗಿನಿಂದ ಬಂದು, ನಿಮಗೆ ಅಸಹ್ಯವಾಗುವ ತನಕ ಪೂರ್ತಿ ತಿಂಗಳವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವ ದೇವರನ್ನು ಅಲಕ್ಷ್ಯಮಾಡಿ, ಅವರ ಎದುರಿನಲ್ಲಿ ಅತ್ತು, ‘ನಾವು ಏಕೆ ಈಜಿಪ್ಟಿನಿಂದ ಬಂದೆವು,’ ಎಂದು ಹೇಳುತ್ತೀರಲ್ಲಾ, ಎಂದು ಹೇಳು,” ಎಂದರು.
21 ಆದರೆ ಮೋಶೆಯು, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಅವರು ಒಂದು ತಿಂಗಳು ಪೂರ್ತಿ ತಿನ್ನುವ ಹಾಗೆ, ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀವು ಹೇಳಿದ್ದೀರಿ. 22 ಅವರಿಗೆ ಸಾಕಾಗುವ ಹಾಗೆ ಕುರಿದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ಮೀನುಗಳನ್ನೆಲ್ಲಾ ಕೂಡಿಸಿ ತರಬೇಕೋ?” ಎಂದು ಕೇಳಿದನು.
23 ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಎಂದು ನೀನು ನೋಡುವೆ,” ಎಂದರು.
24 ಆಗ ಮೋಶೆ ಹೋಗಿ ಯೆಹೋವ ದೇವರ ಮಾತುಗಳನ್ನು ಜನರಿಗೆ ಹೇಳಿ, ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ, ಗುಡಾರದ ಸುತ್ತಲೂ ನಿಲ್ಲಿಸಿದನು. 25 ಯೆಹೋವ ದೇವರು ಮೇಘದೊಳಗಿಂದ ಇಳಿದು, ಅವನ ಸಂಗಡ ಮಾತನಾಡಿ, ಅವನ ಮೇಲಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ತೆಗೆದು, ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟರು. ಆದ್ದರಿಂದ ಆತ್ಮವು ಅವರ ಮೇಲೆ ನೆಲೆಯಾಗಿದ್ದಾಗ ಅವರು ಪ್ರವಾದಿಸಿದರು. ಆಮೇಲೆ ಅವರು ಪ್ರವಾದಿಸಲಿಲ್ಲ.
26 ಆದರೆ ಇಬ್ಬರು ಮನುಷ್ಯರು ಪಾಳೆಯದಲ್ಲಿ ಉಳಿದರು. ಅವರಲ್ಲಿ ಒಬ್ಬನ ಹೆಸರು ಎಲ್ದಾದ್. ಮತ್ತೊಬ್ಬನ ಹೆಸರು ಮೇದಾದ್. ಇವರು ನಾಯಕರ ಪಟ್ಟಿಯಲ್ಲಿದ್ದವರಾಗಿದ್ದರು. ಇವರ ಮೇಲೆ ಆತ್ಮವು ನೆಲೆಯಾಯಿತು. ಇವರು ಗುಡಾರಕ್ಕೆ ಹೊರಟು ಹೋಗದೆ, ಪಾಳೆಯದಲ್ಲಿ ಪ್ರವಾದಿಸುತ್ತಿದ್ದರು. 27 ಆಗ ಒಬ್ಬ ಯೌವನಸ್ಥನು ಓಡಿಬಂದು ಮೋಶೆಗೆ, “ಎಲ್ದಾದನೂ, ಮೇದಾದನೂ ಪಾಳೆಯದಲ್ಲಿ ಪ್ರವಾದಿಸುತ್ತಾರೆ,” ಎಂದನು.
28 ಅದಕ್ಕೆ ಯೌವನಸ್ಥರಲ್ಲಿ ಒಬ್ಬನೂ, ಮೋಶೆಯ ಸೇವಕನೂ ಆಗಿದ್ದ ನೂನನ ಮಗ ಯೆಹೋಶುವನು, “ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ,” ಎಂದನು.
29 ಮೋಶೆಯು ಅವನಿಗೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚು ಪಡುತ್ತೀಯೋ? ಯೆಹೋವ ದೇವರ ಜನರೆಲ್ಲಾ ಪ್ರವಾದಿಗಳಾಗಿದ್ದು, ಯೆಹೋವ ದೇವರು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೆಯದು,” ಎಂದನು. 30 ಆಗ ಮೋಶೆಯೂ, ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
31 ಯೆಹೋವ ದೇವರ ಕಡೆಯಿಂದ ಒಂದು ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು, ಪಾಳೆಯದ ಸುತ್ತಲೂ ಈ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು, ಆ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು. 32 ಜನರು ಆ ದಿನವೆಲ್ಲಾ, ಆ ರಾತ್ರಿಯೆಲ್ಲಾ, ಮರು ದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಸಾವಿರ ಕಿಲೋಗ್ರಾಮಿನಷ್ಟು ಕೂಡಿಸಿದನು. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು. 33 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ, ಅದನ್ನು ಅಗಿಯುವುದಕ್ಕಿಂತ ಮುಂಚೆ ಯೆಹೋವ ದೇವರು ಜನರನ್ನು ಘೋರ ವ್ಯಾಧಿಯಿಂದ ಸಾಯಿಸಿದನು. 34 ಆಶೆ ಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್ ಹತಾವ ಎಂದು ಹೆಸರಾಯಿತು.
35 ತರುವಾಯ ಜನರು ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿಗೆ ಪ್ರಯಾಣಮಾಡಿ ಬಂದು, ಅಲ್ಲಿ ಇಳಿದುಕೊಂಡರು.
* 11:3 11:3 ತಬೇರ ಅರ್ಥ ಬೆಂಕಿಯಿಂದ ಉರಿಯುವ 11:34 11:34 ಕಿಬ್ರೋತ್ ಹತಾವ ಅರ್ಥ ಕಡುಬಯಕೆಯ ಸಮಾಧಿಗಳು