12
ಯೆರೆಮೀಯನು ದೂರು ಹೇಳಿಕೊಂಡದ್ದು 
 
1 ಓ ಯೆಹೋವ ದೇವರೇ, ನಾನು ನಿಮ್ಮ ಸಂಗಡ ವಾದಿಸುವಾಗ,  
ನೀವು ನೀತಿವಂತರೇ ಆಗಿದ್ದೀರಿ.  
ಆದರೂ ನಾನು ನಿಮ್ಮ ಸಂಗಡ ನ್ಯಾಯವಾದವುಗಳನ್ನು ಕುರಿತು ಮಾತನಾಡುವೆನು.  
ದುಷ್ಟರ ಮಾರ್ಗವು ಸಮೃದ್ಧಿಯಾಗುವುದು ಏಕೆ?  
ಮಹಾ ವಂಚನೆ ಮಾಡುವವರೆಲ್ಲರು ಸುಖವಾಗಿರುವುದು ಏಕೆ?   
2 ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದು ಏಕೆ? ನೀವು ಅವರನ್ನು ನಾಟಿದ್ದೀರಿ,  
ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ,  
ನೀವು ಅವರ ಬಾಯಿಗೆ ಸಮೀಪ,  
ಅಂತರಿಂದ್ರಿಯಕ್ಕೆ ದೂರ.   
3 ಯೆಹೋವ ದೇವರೇ, ನೀವು ನನ್ನನ್ನು ತಿಳಿದಿದ್ದೀರಿ,  
ನನ್ನನ್ನು ನೋಡುತ್ತಾ ನಿಮ್ಮೊಂದಿಗೆ ಅನ್ಯೋನ್ಯವಾಗಿರುವ ನನ್ನ ಹೃದಯವನ್ನು ಪರೀಕ್ಷಿಸುತ್ತೀರಿ,  
ಅವರನ್ನು ಕುರಿಗಳನ್ನೋ ಎಂಬಂತೆ ಕೊಲೆಗೆ ಎಳೆದು ವಧೆಯ ದಿನಕ್ಕೆ ಗೊತ್ತುಮಾಡಿರಿ.   
4 ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲು,  
ಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು?  
ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ  
ಮೃಗ ಪಕ್ಷಿಗಳು ಬಡಿದುಕೊಂಡು ಹೋಗಿವೆ;  
ಆಹಾ, ಅವನು ನಮ್ಮ ಅಂತ್ಯ ಗತಿಯನ್ನು  
ನೋಡುವುದೇ ಇಲ್ಲ, ಎಂದು ಹೇಳಿದ್ದಾರಷ್ಟೆ.   
ದೇವರ ಉತ್ತರ 
 
5 “ಕಾಲಾಳುಗಳ ಸಂಗಡ ಓಡುವಾಗ ನಿನಗೆ ಆಯಾಸವಾದರೆ,  
ಕುದುರೆಗಳ ಸಂಗಡ ಹೇಗೆ ಹೋರಾಡುವೆ?  
ನೀನು ಸುರಕ್ಷಿತವಾದ ದೇಶದಲ್ಲಿ ಎಡವಿದರೆ,  
ಯೊರ್ದನಿನ ದಟ್ಟ ಅಡವಿಯಲ್ಲಿ ಹೇಗೆ ಸುಧಾರಿಸುವೆ?   
6 ಏಕೆಂದರೆ, ನಿನ್ನ ಸಹೋದರರೂ,  
ನಿನ್ನ ತಂದೆಯ ಮನೆತನದವರೂ ನಿನಗೆ ವಂಚನೆ ಮಾಡಿದ್ದಾರೆ.  
ಹೌದು, ಇವರೇ ನಿನಗೆ ವಿರೋಧವಾಗಿ ಬಂದು ಜೋರಾಗಿ ಕೂಗಿದ್ದಾರೆ.  
ಅವರು ನಿನಗೆ ಒಳ್ಳೆಯ ಮಾತುಗಳನ್ನು ಹೇಳಿದರೂ,  
ಅವರನ್ನು ನಂಬಬೇಡ.   
   
 
7 “ನನ್ನ ಮನೆಯನ್ನು ಬಿಟ್ಟಿದ್ದೇನೆ,  
ನನ್ನ ಸೊತ್ತನ್ನು ತ್ಯಜಿಸಿದ್ದೇನೆ.  
ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು  
ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.   
8 ನನ್ನ ಸೊತ್ತು ನನಗೆ  
ಅಡವಿಯಲ್ಲಿರುವ ಸಿಂಹದ ಹಾಗಾಯಿತು.  
ಅದು ನನಗೆ ವಿರೋಧವಾಗಿ ಕೂಗುತ್ತದೆ.  
ಆದ್ದರಿಂದ ಅದನ್ನು ಹಗೆ ಮಾಡಿದ್ದೇನೆ.   
9 ನನ್ನ ಸೊತ್ತು ನನಗೆ ಚಿತ್ರವರ್ಣದ ಪಕ್ಷಿಯಾಯಿತು.  
ಸುತ್ತಲಾಗಿ ಹದ್ದುಗಳು ಅದಕ್ಕೆ ವಿರೋಧವಾಗಿವೆ.  
ಬನ್ನಿ, ಕಾಡುಮೃಗಗಳನ್ನೆಲ್ಲಾ ಕೂಡಿಸಿರಿ, ನುಂಗುವುದಕ್ಕೆ ಅವುಗಳನ್ನು ತನ್ನಿರಿ.   
10 ಅನೇಕ ಕುರುಬರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ;  
ನನ್ನ ಹೊಲವನ್ನು ತುಳಿದುಬಿಟ್ಟಿದ್ದಾರೆ;  
ನಾನು ಮೆಚ್ಚಿದ ಭಾಗವನ್ನು  
ಹಾಳಾದ ಮರುಭೂಮಿಯಾಗಿ ಮಾಡಿದ್ದಾರೆ.   
11 ಅದನ್ನು ಹಾಳು ಮಾಡಿದ್ದಾರೆ.  
ಅದು ಒಣಗಿ ಬರಿದಾಗಿ ಹೋಗಿದೆ.  
ದೇಶವೆಲ್ಲಾ ಹಾಳಾಯಿತು.  
ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವುದಿಲ್ಲ.   
12 ಮರುಭೂಮಿಯಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ  
ನಾಶಮಾಡುವವರು ಬಂದಿದ್ದಾರೆ.  
ಏಕೆಂದರೆ, ಯೆಹೋವ ದೇವರ ಖಡ್ಗವು ದೇಶದ ಒಂದು ಕಡೆಯಿಂದ  
ದೇಶದ ಇನ್ನೊಂದು ಕಡೆಯವರೆಗೂ ನುಂಗಿಬಿಡುತ್ತದೆ.  
ಯಾವ ಮನುಷ್ಯನೂ ಸುರಕ್ಷಿತವಾಗಿ ಉಳಿಯುವುದಿಲ್ಲ.   
13 ಗೋಧಿಯನ್ನು ಬಿತ್ತಿದ್ದಾರೆ,  
ಆದರೆ ಮುಳ್ಳುಗಳನ್ನು ಕೊಯ್ಯುವವರು ಕಷ್ಟಪಟ್ಟಿದ್ದಾರೆ,  
ಆದರೆ ಪ್ರಯೋಜನವಾಗುವುದಿಲ್ಲ.  
ಯೆಹೋವ ದೇವರ ಉಗ್ರಕೋಪದ ಉರಿಯಿಂದ ನಿಮ್ಮ ಸುಗ್ಗಿಯ ನಿಮಿತ್ತ ನಾಚಿಕೆ ಪಡುವಿರಿ.”   
14 ಯೆಹೋವ ದೇವರ ಸ್ವಜನರಾದ ಇಸ್ರಾಯೇಲರಿಗೆ ದಯಪಾಲಿಸಿದ ಸೊತ್ತಿಗೆ ಕೈಹಾಕುವ ಕೆಟ್ಟ ನೆರೆಯವರಿಗೆ ಕೊಟ್ಟ ಎಚ್ಚರಿಕೆ: “ಈ ನಾಡಿನವರನ್ನು ಅವರವರ ನಾಡಿನಿಂದಲೇ ಸಸಿಯಂತೆ ಕಿತ್ತುಬಿಡುವೆನು. ಯೆಹೂದ ವಂಶವನ್ನು ಅವರ ಮಧ್ಯೆಯಿಂದ ಕಿತ್ತುಬಿಡುವೆನು.  
15 ನಾನು ಅವರನ್ನು ಕಿತ್ತು ಹಾಕಿದ ಮೇಲೆ, ನಾನು ಹಿಂದಿರುಗಿ ಅವರನ್ನು ಕರುಣಿಸುವೆನು. ತಮ್ಮ ತಮ್ಮ ಸೊತ್ತಿಗೂ, ತಮ್ಮ ತಮ್ಮ ದೇಶಕ್ಕೂ ಅವರನ್ನು ತಿರುಗಿ ಬರಮಾಡುವೆನು.  
16 ಇವರು ಮೊದಲು ಬಾಳನ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ನನ್ನ ಜನರಿಗೆ ಕಲಿಸಿಕೊಟ್ಟ ಪ್ರಕಾರ, ‘ಈಗ ಯೆಹೋವ ದೇವರ ಜೀವದಾಣೆ,’ ಎಂದು ಹೇಳಿ ನನ್ನ ಹೆಸರಿನ ಆಣೆ ಇಟ್ಟುಕೊಳ್ಳುವುದಕ್ಕೆ ನನ್ನ ಜನರ ಮಾರ್ಗಗಳನ್ನು ಜಾಗ್ರತೆಯಾಗಿ ಕಲಿತುಕೊಂಡರೆ, ಆಗ ಅವರು ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು.  
17 ಆದರೆ ಅವರು ಕೇಳದೆ ಹೋದರೆ, ಆ ಜನಾಂಗವನ್ನು ಸಂಪೂರ್ಣವಾಗಿ ಕಿತ್ತು ನಾಶಮಾಡುವೆನು,” ಎಂದು ಯೆಹೋವ ದೇವರು ನುಡಿಯುತ್ತಾರೆ.