4
ಯೇಸು ಸಮಾರ್ಯದ ಸ್ತ್ರೀಯೊಂದಿಗೆ ಮಾತನಾಡಿದ್ದು
ಫರಿಸಾಯರಲ್ಲಿ ಯೋಹಾನನಿಗಿಂತಲೂ ಯೇಸು ಹೆಚ್ಚಿನ ಶಿಷ್ಯರನ್ನು ಹೊಂದಿದ್ದಾರೆ ಮತ್ತು ದೀಕ್ಷಾಸ್ನಾನ ಮಾಡಿಸುತ್ತಾರೆ ಎಂಬುವುದನ್ನು ಫರಿಸಾಯರು ಕೇಳಿಸಿಕೊಂಡರು. ಆದರೆ ಯೇಸು ತಾವೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಅವರ ಶಿಷ್ಯರು ಮಾಡಿಸುತ್ತಿದ್ದರು. ಫರಿಸಾಯರು ಕೇಳಿಸಿಕೊಂಡದ್ದನ್ನು ಯೇಸು ತಿಳಿದಾಗ, ಯೇಸು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತಿರುಗಿ ಹೊರಟು ಹೋದರು.
ಯೇಸು ಸಮಾರ್ಯದ ಮಾರ್ಗವಾಗಿ ಹೋಗಬೇಕಾಗಿತ್ತು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿರುವ ಸುಖರೆಂಬ ಸಮಾರ್ಯದ ಪಟ್ಟಣಕ್ಕೆ ಯೇಸು ಬಂದರು. ಅಲ್ಲಿ ಯಾಕೋಬನ ಬಾವಿ ಇತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡವರಾಗಿ ಆ ಬಾವಿಯ ಬಳಿಯಲ್ಲಿ ಕುಳಿತುಕೊಂಡರು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
ಆಗ ಸಮಾರ್ಯದವಳಾದ ಒಬ್ಬ ಸ್ತ್ರೀಯು ನೀರು ಸೇದುವುದಕ್ಕಾಗಿ ಬಂದಳು. ಯೇಸು ಆಕೆಗೆ, “ನನಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು. ಯೇಸುವಿನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳಲು ಪಟ್ಟಣದೊಳಕ್ಕೆ ಹೋಗಿದ್ದರು.
ಆದ್ದರಿಂದ ಆ ಸಮಾರ್ಯ ಸ್ತ್ರೀಯು ಯೇಸುವಿಗೆ, “ನೀನು ಯೆಹೂದ್ಯನಾಗಿದ್ದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದು ಹೇಗೆ,” ಎಂದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಒಡನಾಟ ಇರಲಿಲ್ಲ.*
10 ಯೇಸು ಆಕೆಗೆ, “ದೇವರ ವರವನ್ನೂ, ‘ಕುಡಿಯುವುದಕ್ಕೆ ನೀರು ಕೊಡು,’ ಎಂದು ಕೇಳುವ ನಾನು ಯಾರೆಂಬುದನ್ನೂ ನೀನು ತಿಳಿದಿದ್ದರೆ ನೀನೇ ನನ್ನಿಂದ ನೀರನ್ನು ಕೇಳುತ್ತಿದ್ದೆ. ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆನು,” ಎಂದು ಹೇಳಿದರು.
11 ಅದಕ್ಕೆ ಆ ಸ್ತ್ರೀಯು, “ಅಯ್ಯಾ, ನೀರು ಸೇದುವುದಕ್ಕೆ ನಿಮ್ಮ ಹತ್ತಿರ ಏನೂ ಇಲ್ಲವಲ್ಲಾ, ಬಾವಿಯೋ ಆಳವಾಗಿದೆ. ಹೀಗಿರುವಲ್ಲಿ ಜೀವಜಲವು ನಿನಗೆ ಎಲ್ಲಿಂದ ಬಂದೀತು? 12 ಯಾಕೋಬನ ಮಕ್ಕಳು ಮತ್ತು ಪಶುಗಳು ಈ ಬಾವಿಯ ನೀರನ್ನು ಕುಡಿದರು. ಅದನ್ನು ನಮಗೆ ಕೊಟ್ಟ ನಮ್ಮ ತಂದೆ ಯಾಕೋಬನಿಗಿಂತ ನೀನು ದೊಡ್ಡವನೋ?” ಎಂದಳು.
13 ಯೇಸು ಆಕೆಗೆ, “ಈ ನೀರನ್ನು ಕುಡಿಯುವ ಪ್ರತಿಯೊಬ್ಬರಿಗೆ ಪುನಃ ದಾಹವಾಗುವುದು. 14 ಆದರೆ ನಾನು ಕೊಡುವ ನೀರನ್ನು ಕುಡಿಯುವವರಿಗೆ ಎಂದೆಂದಿಗೂ ದಾಹವಾಗದು. ನಾನು ಅವರಿಗೆ ಕೊಡುವ ನೀರು ಅವರಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬುಗ್ಗೆಯಾಗಿರುವುದು,” ಎಂದರು.
15 ಅದಕ್ಕೆ ಆ ಸ್ತ್ರೀಯು, “ಅಯ್ಯಾ, ಆ ನೀರನ್ನೇ ನನಗೆ ಕೊಡು. ಆಗ ನನಗೆ ದಾಹವಾಗುವುದಿಲ್ಲ. ಇನ್ನು ಮುಂದೆ ನಾನು ನೀರು ಸೇದುವುದಕ್ಕೆ ಇಲ್ಲಿಗೆ ಬರುವ ಅವಶ್ಯವಿರುವುದಿಲ್ಲ,” ಎಂದಳು.
16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದರು.
17 ಅದಕ್ಕೆ ಆ ಸ್ತ್ರೀಯು, “ನನಗೆ ಗಂಡನಿಲ್ಲ,” ಎಂದಳು.
ಯೇಸು ಆಕೆಗೆ, “ನನಗೆ ಗಂಡನಿಲ್ಲ, ಎಂದು ನೀನು ಹೇಳಿದ್ದು ಸರಿಯೇ. 18 ನಿನಗೆ ಐದು ಮಂದಿ ಗಂಡಂದಿರು ಇದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು.
19 ಆಗ ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ನೀವು ಒಬ್ಬ ಪ್ರವಾದಿಯೆಂದು ನನಗೆ ಕಾಣುತ್ತದೆ. 20 ನಮ್ಮ ಪಿತೃಗಳು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸಿದರು. ಆದರೆ, ‘ಆರಾಧಿಸತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ’ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ,” ಎಂದಳು.
21 ಯೇಸು ಆಕೆಗೆ, “ಅಮ್ಮಾ, ನನ್ನನ್ನು ನಂಬು, ಈ ಬೆಟ್ಟದಲ್ಲಿಯಾಗಲಿ ಯೆರೂಸಲೇಮಿನಲ್ಲಾಗಲಿ ನೀವು ತಂದೆಯನ್ನು ಆರಾಧಿಸದೆ ಇರುವ ಕಾಲ ಬರುತ್ತದೆ. 22 ನೀವು ಸಮಾರ್ಯದವರು ಅರಿಯದೆ ಇರುವುದನ್ನು ಆರಾಧಿಸುತ್ತೀರಿ. ನಾವು ಅರಿತಿರುವುದನ್ನೇ ಆರಾಧಿಸುವವರು. ಏಕೆಂದರೆ ರಕ್ಷಣೆಯು ಯೆಹೂದ್ಯರಿಂದಲೇ. 23 ಆದರೆ ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ಏಕೆಂದರೆ ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾರೆ. 24 ದೇವರು ಆತ್ಮರಾಗಿದ್ದಾರೆ. ಅವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು,” ಎಂದರು.
25 ಆ ಸ್ತ್ರೀಯು ಯೇಸುವಿಗೆ, “ಕ್ರಿಸ್ತ ಎಂದು ಕರೆಯಲಾಗುವ ಮೆಸ್ಸೀಯ ಬರುತ್ತಾರೆಂದು ನಾನು ಬಲ್ಲೆನು. ಅವರು ಬಂದಾಗ ನಮಗೆ ಎಲ್ಲವನ್ನೂ ತಿಳಿಸುವರು,” ಎಂದಳು.
26 ಯೇಸು ಆಕೆಗೆ, “ನಿನ್ನೊಂದಿಗೆ ಮಾತನಾಡುವ ನಾನೇ ಆತನು!” ಎಂದರು.
ಶಿಷ್ಯರು ಯೇಸುವಿನ ಹತ್ತಿರ ತಿರುಗಿ ಬಂದದ್ದು
27 ಅಷ್ಟರೊಳಗೆ ಅವರ ಶಿಷ್ಯರು ಬಂದು ಯೇಸು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿಮಗೆ ಏನು ಬೇಕು? ಆಕೆಯೊಂದಿಗೆ ಏಕೆ ಮಾತನಾಡುತ್ತಿರುವಿರಿ?” ಎಂದು ಒಬ್ಬನಾದರೂ ಕೇಳಲಿಲ್ಲ.
28 ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲಿಯೇ ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ, 29 “ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ವ್ಯಕ್ತಿಯನ್ನು ಕಾಣಿರಿ, ಬರತಕ್ಕ ಕ್ರಿಸ್ತ ಇವರೇ ಆಗಿರಬಹುದು?” ಎಂದಳು. 30 ಆಗ ಅವರು ಪಟ್ಟಣದಿಂದ ಯೇಸುವಿನ ಬಳಿಗೆ ಬಂದರು.
31 ಆ ಸಮಯದಲ್ಲಿ ಶಿಷ್ಯರು, “ಗುರುವೇ ಊಟಮಾಡಿರಿ,” ಎಂದು ಯೇಸುವನ್ನು ಕೇಳಿಕೊಂಡರು.
32 ಆದರೆ ಯೇಸು ಅವರಿಗೆ, “ನಿಮಗೆ ತಿಳಿಯದಿರುವ ಆಹಾರವು ನನ್ನಲ್ಲಿದೆ,” ಎಂದರು.
33 ಶಿಷ್ಯರು, “ಯಾರಾದರೂ ಅವರಿಗೆ ಏನಾದರೂ ತಿನ್ನುವುದಕ್ಕೆ ತಂದು ಕೊಟ್ಟರೋ?” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
34 ಯೇಸು ಅವರಿಗೆ, “ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಿ ಅವರ ಕೆಲಸವನ್ನು ಪೂರೈಸುವುದೇ ನನ್ನ ಆಹಾರ. 35 ನೀವು, ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುತ್ತದೆ’ ಎಂದು ಹೇಳುವುದಿಲ್ಲವೇ? ಮತ್ತು ಇಗೋ, ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ. ಏಕೆಂದರೆ ಅವು ಈಗಾಗಲೇ ಸುಗ್ಗಿಗೆ ಸಿದ್ಧವಾಗಿವೆ. 36 ಕೊಯ್ಯುವವನು ಕೂಲಿಯನ್ನು ಪಡೆದು ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳುತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಿಸುವರು. 37 ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು,’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ. 38 ನೀವು ಪ್ರಯಾಸ ಪಡದಂಥದ್ದನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಇತರರು ಪ್ರಯಾಸಪಟ್ಟರು. ನೀವು ಅವರ ಪ್ರಯಾಸದ ಫಲವನ್ನು ಪಡೆದಿದ್ದೀರಿ,” ಎಂದರು.
ಸಮಾರ್ಯದವರು ಅನೇಕರು ನಂಬಿದ್ದು
39 ಆಗ, “ನಾನು ಮಾಡಿದ್ದೆಲ್ಲವನ್ನು ಆತನು ನನಗೆ ತಿಳಿಸಿದನು” ಎಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿನಿಂದ ಆ ಪಟ್ಟಣದ ಅನೇಕ ಸಮಾರ್ಯದವರು ಯೇಸುವಿನಲ್ಲಿ ನಂಬಿಕೆ ಇಟ್ಟರು. 40 ಆ ಸಮಾರ್ಯದವರು ಯೇಸುವಿನ ಬಳಿಗೆ ಬಂದು ತಮ್ಮೊಂದಿಗೆ ಇರಬೇಕೆಂದು ಅವರನ್ನು ಬೇಡಿಕೊಂಡರು. ಹೀಗೆ ಯೇಸು ಎರಡು ದಿವಸ ಅಲ್ಲಿಯೇ ಉಳಿದರು. 41 ಇನ್ನೂ ಹೆಚ್ಚು ಜನರು ಯೇಸುವಿನ ವಾಕ್ಯದ ದೆಸೆಯಿಂದ ನಂಬಿದರು.
42 ಜನರು ಆ ಸ್ತ್ರೀಗೆ, “ನಾವು ಇನ್ನು ಮುಂದೆ ನಂಬುವುದು ನಿನ್ನ ಮಾತಿನಿಂದಲ್ಲ. ಏಕೆಂದರೆ ನಾವೇ ಸ್ವತಃ ಕೇಳಿದ್ದೇವೆ. ಈತನು ನಿಜವಾಗಿಯೂ ಲೋಕ ರಕ್ಷಕನೆಂದು ತಿಳಿದಿದ್ದೇವೆ,” ಎಂದರು.
ಅಧಿಕಾರಿಯ ಮಗನನ್ನು ಯೇಸು ಗುಣಪಡಿಸಿದ್ದು
43 ಎರಡು ದಿವಸಗಳಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದರು. 44 ಪ್ರವಾದಿಗೆ ತನ್ನ ಸ್ವದೇಶದಲ್ಲಿ ಮರ್ಯಾದೆ ಇಲ್ಲವೆಂದು ಯೇಸು ತಾವೇ ಹೇಳಿದ್ದರು. 45 ಯೇಸು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಅವರನ್ನು ಸ್ವಾಗತಿಸಿದರು. ಪಸ್ಕಹಬ್ಬದ ಸಮಯದಲ್ಲಿ ಯೇಸು ಯೆರೂಸಲೇಮಿನಲ್ಲಿ ಮಾಡಿದವುಗಳನ್ನೆಲ್ಲಾ ಕಂಡಿದ್ದರು.
46 ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ತಿರುಗಿ ಬಂದರು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು. 47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಅವನು ಕೇಳಿದಾಗ ಅವರ ಬಳಿಗೆ ಹೋಗಿ, ಯೇಸು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಬೇಡಿಕೊಂಡನು. ಏಕೆಂದರೆ ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.
48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕಾಣದ ಹೊರತು ನಂಬುವುದೇ ಇಲ್ಲ,” ಎಂದರು.
49 ಆಗ ಆ ಅಧಿಕಾರಿಯು ಯೇಸುವಿಗೆ, “ಅಯ್ಯಾ, ನನ್ನ ಮಗನು ಸಾಯುವ ಮೊದಲೇ ಬನ್ನಿರಿ,” ಎಂದನು.
50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು,” ಎಂದರು.
ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು. 51 ಹೀಗೆ ಅವನು ಇಳಿದು ಹೋಗುತ್ತಿರುವಾಗಲೇ ಸೇವಕರು ಅವನನ್ನು ಸಂಧಿಸಿ, ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು. 52 ಅವನು, “ಯಾವ ಸಮಯದಲ್ಲಿ ಮಗನು ಚೇತರಿಸಿಕೊಂಡನು?” ಎಂದು ಅವರನ್ನು ವಿಚಾರಿಸಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಜ್ವರವು ಬಿಟ್ಟಿತು,” ಎಂದು ಸೇವಕರು ಅವನಿಗೆ ಹೇಳಿದರು.
53 ಹೀಗೆ, “ನಿನ್ನ ಮಗನು ಬದುಕುವನು” ಎಂದು ಯೇಸು ತನಗೆ ಹೇಳಿದ ಸಮಯದಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು, ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
54 ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.
* 4:9 4:9 ಒಡನಾಟ ಇರಲಿಲ್ಲ ಅಂದರೆ ಸಮಾರ್ಯದವರು ಬಳಸುತ್ತಿದ್ದ ಪಾತ್ರೆಗಳನ್ನು ಯೆಹೂದ್ಯರು ಬಳಸುತ್ತಿರಲಿಲ್ಲ