27
ಯೋಬನ ಕೊನೆಯ ಮಾತುಗಳು 
 
1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:   
2 ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ,  
ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,   
3 “ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ;  
ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.   
4 ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ.  
ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.   
5 ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ;  
ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.   
6 ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ;  
ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ;  
ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.   
   
 
7 “ನನ್ನ ಶತ್ರು ದುಷ್ಟನ ಹಾಗಿರಲಿ;  
ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.   
8 ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ,  
ಅವನಿಗೆ ನಿರೀಕ್ಷೆ ಎಲ್ಲಿ?   
9 ಭಕ್ತಿಹೀನನಿಗೆ ಯಾತನೆ ಬಂದರೆ,  
ದೇವರು ಅವನ ಮೊರೆಯನ್ನು ಕೇಳುವರೋ?   
10 ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ?  
ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?   
   
 
11 “ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು;  
ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.   
12 ನೀವೆಲ್ಲರೂ ಇದನ್ನು ನೋಡಿದ್ದರೂ,  
ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?   
   
 
13 “ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ;  
ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:   
14 ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು;  
ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.   
15 ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು;  
ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.   
16 ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ,  
ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,   
17 ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು;  
ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.   
18 ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ,  
ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.   
19 ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು;  
ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.   
20 ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು;  
ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.   
21 ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು;  
ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.   
22 ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು,  
ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.   
23 ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು;  
ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”