11
ನೀರಿನ ಮೇಲೆ ರೊಟ್ಟಿ 
 
1 ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಕಳುಹಿಸು.  
ಬಹಳ ದಿನಗಳ ಮೇಲೆ ಅದರಿಂದ ನಿನಗೆ ಲಾಭ ಸಿಗುವುದು.   
2 ನಿನ್ನ ಹಣವನ್ನು ಏಳೆಂಟು ಮಂದಿಗೆ ವೆಚ್ಚಮಾಡು.  
ಏಕೆಂದರೆ ಭೂಮಿಯ ಮೇಲೆ ಮುಂದೆ ಯಾವ ವಿಪತ್ತು ಬರುವುದೋ ನಿನಗೆ ತಿಳಿಯದು.   
   
 
3 ಮೋಡಗಳು ಮಳೆಯಿಂದ ತುಂಬಿದ್ದರೆ,  
ಅವು ಭೂಮಿಯ ಮೇಲೆ ಸುರಿದುಬಿಡುತ್ತವೆ.  
ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ,  
ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವುದು.   
4 ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ.  
ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.   
   
 
5 ಗಾಳಿಯ ಚಲನೆಯನ್ನಾಗಲಿ  
ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನೀನು ಹೇಗೆ ಗ್ರಹಿಸಲಾರೆಯೋ,  
ಹಾಗೆಯೇ, ಸರ್ವ ಸೃಷ್ಟಿಕರ್ತ ಆಗಿರುವ  
ದೇವರ ಕೆಲಸವನ್ನು ನೀನು ಗ್ರಹಿಸಲಾರೆ.   
   
 
6 ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು.  
ಸಾಯಂಕಾಲದವರೆಗೂ ನಿನ್ನ ಕೈಗೆ ಬಿಡುವು ಕೊಡಬೇಡ.  
ಏಕೆಂದರೆ ಇದು ಸಫಲವೋ ಅದು ಸಫಲವೋ ನಿನಗೆ ತಿಳಿಯದು.  
ಎರಡೂ ಒಳ್ಳೆಯ ಬೆಳೆಯನ್ನು ಕೊಡಲು ಸಾಧ್ಯವಿದೆ.   
ಸೃಷ್ಟಿಕರ್ತ ದೇವರನ್ನು ಸ್ಮರಿಸು 
 
7 ಬೆಳಕು ಹಿತಕರ.  
ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.   
8 ಒಬ್ಬನು ಅನೇಕ ವರ್ಷಗಳು ಬದುಕಿ,  
ಅವುಗಳಲ್ಲೆಲ್ಲಾ ಸಂತೋಷಪಟ್ಟರೂ  
ಕತ್ತಲೆಯ ದಿನಗಳನ್ನು ನೆನಪಿಸಿಕೊಳ್ಳಲಿ,  
ಏಕೆಂದರೆ ಅಂಥ ದಿನಗಳು ಬಹಳ.  
ಮುಂದಾಗುವುದೆಲ್ಲವೂ ವ್ಯರ್ಥವೇ.   
   
 
9 ಯುವಕನೇ, ನಿನ್ನ ಯೌವನದಲ್ಲಿ ಸಂತೋಷಪಡು.  
ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ.  
ನೀನು ನಿನ್ನ ಮನಸ್ಸಿಗೆ ಬಂದಂತೆಯೂ  
ನಿನ್ನ ಕಣ್ಣಿನ ನೋಟದಂತೆಯೂ ನಡೆ.  
ಆದರೆ ಈ ಎಲ್ಲಾ ಸಂಗತಿಗಳಿಗಾಗಿ  
ದೇವರು ನಿನ್ನನ್ನು ನ್ಯಾಯವಿಚಾರಿಸುವರು ಎಂದು ತಿಳಿದುಕೋ.   
10 ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು.  
ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು.  
ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.